ರೈಲಲ್ಲಿ ನಾಲ್ಕು ಮಂದಿಯ ಕೊಲೆ: ಕೋಮುದ್ವೇಷ ಇಲ್ಲ ಅಂದ ರೈಲ್ವೆ ಪೊಲೀಸರಿಂದಲೇ ಆರೋಪಿ ಕಾನ್ಸ್ ಟೇಬಲ್ ವಿರುದ್ಧ ದ್ವೇಷ ಹರಡಿರುವ ಬಗ್ಗೆ ಕೇಸ್ ಫೈಲ್

Arun Kumar
0

ಮೊನ್ನೆ ಜೈಪುರ-ಮುಂಬೈ ರೈಲಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ ರೈಲ್ವೇ ಸಂರಕ್ಷಣಾ ಪಡೆಯ ಕಾನ್ಸ್‌ಟೇಬಲ್‌ ಕೃತ್ಯದಲ್ಲಿ ಯಾವುದೇ ಕೋಮು ದ್ವೇಷ ಇಲ್ಲ ಎಂದು ಹೇಳಿದ್ದ ರೈಲ್ವೇ ಪೊಲೀಸರೇ ಇದೀಗ ಧರ್ಮದ ಆಧಾರದಲ್ಲಿ ವಿವಿಧ ವರ್ಗದ ಜನರ ನಡುವೆ ದ್ವೇಷ ಹರಡಿರುವ ಬಗ್ಗೆ ಸೆಕ್ಷನ್‌ 153ಎ ಅಡಿಯಲ್ಲಿ ಆರೋಪವನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ.

ಸರ್ಕಾರಿ ರೈಲ್ವೇ ಪೊಲೀಸರು, ಆರೋಪಿ ಆರ್ ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ವಿರುದ್ಧದ ಪ್ರಥಮ ಮಾಹಿತಿ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಅನ್ನು ಸೇರಿಸಿದ್ದಾರೆ. ಇದು ಧರ್ಮ, ಹುಟ್ಟಿದ ಸ್ಥಳ, ನಿವಾಸ, ಭಾಷೆ,ಜನಾಂಗ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದೆ.

ಆರೋಪಿಬಂಧನದ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯ ಆರೋಪಿಯನ್ನು ಆಗಸ್ಟ್ 11ರವರೆಗೆ ಪೊಲೀಸ್ ಕಸ್ಟಡಿ ನೀಡಿದೆ. ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ), ಶಸ್ತ್ರಾಸ್ತ್ರ ಕಾಯಿದೆ 3, 25, 27 ಮತ್ತು ರೈಲ್ವೇಸ್ ಆಕ್ಟ್ ಕೂಡ ಸೇರಿದೆ.

ರೈಲಿನಲ್ಲಿ ಚೇತನ್ ಸಿಂಗ್ ಗುಂಡು ಹಾರಿಸಿ ವ್ಯಕ್ತಿಯ ರಕ್ತಸಿಕ್ತ ದೇಹವನ್ನು ಕೆಳಗೆ ಬಿದ್ದಿರುವಾಗ ಪಾಕಿಸ್ತಾನ ಮತ್ತು ದೇಶೀಯ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿ ಕೋಮು ದ್ವೇಷದ ಭಾಷಣ ಮಾಡುತ್ತಿರುವುದನ್ನು ಪ್ರಯಾಣಿಕರು ರೆಕಾರ್ಡ್ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೊದಲ್ಲಿ ಆರೋಪಿ ಪಾಕಿಸ್ತಾನ, ಭಾರತೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು “ಠಾಕ್ರೆ” ಹೆಸರನ್ನು ಉಲ್ಲೇಖಿಸಿದ್ದಾನೆ.

ಈ ವಿಡಿಯೊದ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಇದುವರೆಗೆ ನಿರಾಕರಿಸಿಲ್ಲ. ಅದು ಹೀಗಿತ್ತು.
“…ಅಗರ್ ವೋಟ್ ದೇನಾ ಹೈ, ಅಗರ್ ಹಿಂದೂಸ್ತಾನ್ ಮೆ ರೆಹನಾ ಹೈ, ತೋ ಮೈ ಕೆಹತಾ ಹೂ, ಮೋದಿ ಔರ್ ಯೋಗಿ, ಯೇ ದೋ ಹೈ, ಔರ್ ಆಪ್ಕೆ ಠಾಕ್ರೆ” (ನೀವು ಮತ ಚಲಾಯಿಸಲು ಬಯಸಿದರೆ, ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ನಾನು ಹೇಳುತ್ತಿದ್ದೇನೆ ಮೋದಿ ಮತ್ತು ಯೋಗಿ, ಇವರಿಬ್ಬರು ಮತ್ತು ನಿಮ್ಮ ಠಾಕ್ರೆ’) ಎಂದು ಅವರು ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದು.

ಚೇತನ್ ಸಿಂಗ್ ಗುಂಡಿಕ್ಕಿ ಕೊಂದವರಲ್ಲಿ ಮೂವರು ಮುಸ್ಲಿಮರು. ಆರೋಪಿಯು ಮೊದಲು ತನ್ನ ಮೇಲಾಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಟಿಕಾ ರಾಮ್ ಮೀನಾಗೆ ಗುಂಡು ಹಾರಿಸಿದ್ದು, ನಂತರ ಕೋಚ್‌ನಿಂದ ಕೋಚ್‌ಗೆ ಹೋಗಿ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ. ಸಂತ್ರಸ್ತರನ್ನು ಅಬ್ದುಲ್ ಖಾದಿರ್‌ಭಾಯ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ, ಅಖ್ತರ್ ಅಬ್ಬಾಸ್ ಅಲಿ ಮತ್ತು ಸದರ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ.

ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್‌ನ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಈ ವಿಡಿಯೊ ಶೇರ್ ಮಾಡಿ ‘ಇದು ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ದಾಳಿಯಾಗಿದೆ. ಇದು ನಿರಂತರ ಮುಸ್ಲಿಂ ವಿರೋಧಿ ದ್ವೇಷದ ಭಾಷಣದ ಉತ್ಪನ್ನವಾಗಿದೆ. ಅದನ್ನು ಕೊನೆಗೊಳಿಸಲು ನರೇಂದ್ರ ಮೋದಿ ಅವರಿಗೆ ಇಷ್ಟವಿಲ್ಲ. ಆರೋಪಿ ಆರ್ ಪಿಎಫ್ ಜವಾನ್ ಭವಿಷ್ಯದ ಬಿಜೆಪಿ ಅಭ್ಯರ್ಥಿಯಾಗುತ್ತಾರೆಯೇ? ಅವರ ಜಾಮೀನಿಗೆ ಸರ್ಕಾರವು ಬೆಂಬಲ ನೀಡುತ್ತದೆಯೇ? ಬಿಡುಗಡೆಯಾದಾಗ ಅವರಿಗೆ ಹಾರ ಹಾಕಲಾಗುತ್ತದೆಯೇ..?’ ಎಂದು ಕೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)